Monday, 27 April 2020

ರಾಘವೇಂದ್ರ ಗುರು ರಾಯರ ಸೇವಿಸಿರೋ

ರಾಘವೇಂದ್ರ ಗುರು ರಾಯರ ಸೇವಿಸಿರೋ । ಸೌಖ್ಯದಿ ಜೀವಿಸಿರೋ
ತುಂಗಾ ತೀರದಿ ರಘುರಾಮನ ಪೂಜಿಪರೋ । ನರಸಿಂಗನ ಭಜಕರೋ

ಶ್ರೀಸುಧೀಂದ್ರಕರ ಸರೋಜ ಸಂಜಾತ । ಜಗದೊಳಗೆ ಪುನೀತ
ದಾಶರಥಿಯ ದಾಸತ್ವವ ತಾನ್ವಹಿಸಿ ದುರ್ಮತವನು ಜೈಸಿ
ಈ ಸಮೀರ ಮತ ಸಂಸ್ಥಾಪಕರಾಗಿ ನಿಂದಕರನು ನೀಗಿ
ಭೂಸುರರಿಗೆ ಸಂಸೇವ್ಯ ಸದಾಚರಣೀ ಕಂಗೊಳಿಸುವ  ಕರುಣೀ ।।

ಕು೦ದದ ವರಮಂತ್ರಾಲಯದಲ್ಲಿರುವ । ಕರೆದಲ್ಲಿಗೆ ಬರುವ
ವೃಂದಾವನ ಗತ ಮೃತ್ತಿಗೆ ಜಲಪಾನಾ । ಮುಕ್ತಿಗೆ ಸೋಪಾನ
ಸಂದರುಶನ ಮಾತ್ರದಲ್ಲಿ ಮಹತ್ಪಾಪ ಪರಿದೋಡಿಸಲಾಪ
ಮಂದಭಾಗ್ಯರಿಗೆ ದೊರಕದಿರುವ ಸೇವಾ ಶರಣರ ಸಂಜೀವಾ ।।

ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸುವ ಮಾತ್ರ
ಮೋದ ಬಡಿಸುತಿಹ ತಾನಿಹ ಪರದಲ್ಲಿ ಈತಗೆ ಸರಿ ಎಲ್ಲಿ
ಮೇದಿನಿಯೊಳಗಿನ್ನರಸಲು ನಾ ಕಾಣೆ ಪುಸಿ ಯೆಲ್ಲೆನ್ನಾಣೆ
ಪಾದಸ್ಮರಣೆಯ ಮಾಡದವನೇ ಪಾಪಿ ನಾ ಪೇಳ್ವೆನು ಸ್ಥಾಪಿ ।।

ಸ್ವಾಮಿ ಲಾಲಿ ಭಕ್ತ ಪ್ರೇಮ ಲಾಲಿ

ಸ್ವಾಮಿ  ಲಾಲಿ ಭಕ್ತ ಪ್ರೇಮ ಲಾಲಿ
ಕಾಮದೆನಿಪ ಗುರು ಸಾರ್ವಭೌಮ ಲಾಲಿ ।।

ಇಂದ್ರ ಲಾಲಿ ರಾಘವೇಂದ್ರ ಲಾಲಿ
ಸಾಂದ್ರ ಭಕ್ತ ಕುಮುದ ಪೂರ್ಣಚಂದ್ರ ಲಾಲಿ ।।

ತರುಣಿ ಲಾಲಿ ನಿಜ ಕರುಣಿ ಲಾಲಿ
ಶರಣ ಜನರ ಕಾವೊ ಗುಣಪೂರ್ಣ ಲಾಲಿ ।।

ದೇವ ಲಾಲಿ ನಿಜ ಭಾವ ಲಾಲಿ
ಭಾವಿಸುವರ ನಿತ್ಯ ನೀ ಕಾವ ಲಾಲಿ ।।

ರಾಜ ಲಾಲಿ ಕಲ್ಪಭೋಜ ಲಾಲಿ
ರಾಜಿಸುವ ಯತಿಕುಲತೇಜ ಲಾಲಿ ।।

ದಾತ ಲಾಲಿ ನಿಜ ತಾತ ಲಾಲಿ
ಪ್ರೀತ ಗುರುಜಗನ್ನಾಥ ವಿಠ್ಠಲ ಲಾಲಿ ।।

ಬಾರೋ ವೆಂಕಟೇಶ

ಬಾರೋ ವೆಂಕಟೇಶ ಮನೆಗೆ ಬಾರೋ ಶ್ರೀನಿವಾಸ
ತೊಡೆಯಲಿಟ್ಟು ಮುದ್ದು ಕೊಟ್ಟು ಹಾಲು ಸಕ್ಕರೆ
ಸಹಿತವಾಗಿ ಪುಟ್ಟ ಬಟ್ಟಲೊಳಗೆ ನಿನಗೆ
ಹೊಟ್ಟೆ ತುಂಬ ಹಾಲು ಕೊಡುವೆ ।।

ಸಣ್ಣನಾಮ ಹಣೆಯಲ್ಲಿ ಹೊಳೆಯುತಾ
ಶಂಖಚಕ್ರ ಪದ್ಮ ಕಿರೀಟವ ತೋರುತ
ವಾಮಭಾಗದಲ್ಲಿ ಲಕ್ಷ್ಮಿ ದೇವಿಯೊಡನೆ ಸರಸವಾಡುತ
ಅಮ್ಮ ಬಹಳ ಹಸಿವೆಯೆಂದರೆ
ಹೊಟ್ಟೆ ತುಂಬಾ ಹಾಲು ಕೊಡುವೆ ।।

ಚಿನ್ನಿ ಕೋಲು ಚೆಂಡನಾಡುತ ಗೆಳೆಯರೊಡನೆ
ಗೊಲ್ಲನಾಗಿ ಗೋವು ಕಾಯುತ
ಕಾಲು ಪಟ್ಟೆ ಕಾಲಲುಟ್ಟು ತುಳಸಿ ಮಾಲೆ ಕೊರಳ ಧರಿಸಿ
ನಿಮ್ಮ ಪಾದ ಮುಂದಕಿಟ್ಟು
ಎನ್ನ ಮೇಲೆ ಚಿತ್ತವಿಟ್ಟು ।।

ಬಾಲರಿಲ್ಲದ ಬಂಜೆಯೆನುವರೋ ಎನ್ನ ಜನ
ಬಾಲರನ್ನು ಪಡೆದ ಜಾಣರು
ಹಸುಳೆ ಇಲ್ಲದೆ ಬಹಳವಾಗಿ ವ್ಯಸನದಿಂದ ಕಾಲ ಕಳೆದೆ
ಶಿಶುವಾಗಿ ತೋರಿ ಬ೦ದ
ಶೇಷಗಿರಿಯ ಶ್ರೀನಿವಾಸ ।।




ಮೂರು ನಾಮಗಳ ಧರಿಸಿದ ಕಾರಣವೇನು

ಮೂರು ನಾಮಗಳ ಧರಿಸಿದ ಕಾರಣವೇನು
ಸಾರಿ ಪೇಳೆಲೊ ಈಗಲೆ ।।

ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ
ಯಾರು ಇಟ್ಟರು ನಿನಗೆ ಮೂರು ನಾಮಗಳ ।।

ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು
ಶುದ್ಧ ಪಾದಕೆ ಎರಗಿ ಕರವ ಮುಗಿದು
ಎದ್ದು ನೋಡಲು ನಿನ್ನ ಪಣಿಯೋಳಿಪರಿ ಇರಲು
ಮಧ್ವಮತದ ದೈವವೆಂದು ನಿನ್ನ ಕರೆಯುವರೆ ।।

ಸಾಲದೆ ನಿನ್ನ ಸೌಂದರ್ಯಕ್ಕೊಂದು ತಿಲಕ
ಪಾಲಸಾಗರ ಶಾಯಿ ಚೆಲುವಮೂರ್ತಿ
ಕಾಲಕಾಲಕೆ ಬರುವ ಭಕುತಜನಗಳ ವೃಂದ
ದೃಷ್ಟಿತಾಕುವುದೆಂಬ ತೋರುವ ಬಗೆಯೂ ।।

ಮೂರು ಲೋಕಗಳಿಹವು ಮೂರುರೂಪನು ನಾನು
ಮೂರು ಮಾಳ್ಪೆನು ಜಗವ ಮೂರು ಗುಣದಿ
ಮೂರು ತಾಪವ ಗೆದ್ದು ಮಾರ್ಗದಿ ಭಜಿಪೆ
ಪಾರು ಮಾಡುವೆನೆಂದು ತೋರುವ ಬಗೆಯೂ ।।

ಮೂರೆರಡು ಎರಡೆರಡು ಇಂದ್ರಿಯ ವರ್ಜಿಸಲು
ತೋರುವನು ನಿಜರೂಪ ಭಕ್ತಗೆಂದು
ಸಾರುತಿದ್ದರು ವಾಯು ಅರಿಯದೆ ಭಜಿಸಿದಗೆ
ಮೂರುನಾಮಗಳೆ ಗತಿ ಎನ್ನುವ ಬಗೆಯೂ ।।

ಶ್ರೀಲೋಲಕೃಷ್ಣ ಗೋಪಾಲವಿಠಲ ನಿನ್ನ
ಈ ಬಗೆಯ ಲೀಲೆಗಳ ಅರಿವರ್ಯಾರೋ
ವ್ಯಾಳಶಯನ ವೆಂಕಟೇಶ ಎನ್ನ ಮನಕೆ
ಕಾಲಕಾಲಕೆ ನಿನ್ನ ಲೀಲೆಗಳ ತೋರೊ ।।






ತಾಳುವಿಕೆಗಿಂತ ತಪವು ಇಲ್ಲ

ತಾಳುವಿಕೆಗಿಂತನ್ಯ ತಪವು ಇಲ್ಲ
ಇದ ಕೇಳಬಲ್ಲವರಿಗೆ ಪೇಳುವೆನು ಸೊಲ್ಲ ।।

ದುಷ್ಟಮನುಜರು ನುಡಿವ ನಿಷ್ಠುರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೆ ತಾಳು
ನೆಟ್ಟಸಸಿ ಫಲಬರುವಾತನಕ ಶಾಂತಿಯ ತಾಳು
ಕಟ್ಟು ಬುಟ್ಟಿಯ ಮುಂದೆ ಉಣಲುಂಟು ತಾಳು ।।

ಹಳಿದು ಹಂಗಿಸುವ ಹಗೆಯ ಮಾತನು ತಾಳು
ಸುಳಿನುಡಿ ಕುಹಕ ಕುಮಂತ್ರವ ತಾಳು
ಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳು
ಹಲಧರಾನುಜನನ್ನು ಹೃದಯದಲಿ ತಾಳು ।।

ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು
ಉಕ್ಕೋಹಾಲಿಗೆ ನೀರ ಇಕ್ಕುವಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು ।।



ಕರುಣಿಸೋ ರಂಗ

ಕರುಣಿಸೋ ರಂಗ ಕರುಣಿಸೋ
ಇರುಳು ಹಗಲು ನಿನ್ನ ಸ್ಮರಣೆ ಒದಗುವಂತೆ

ರುಕುಮಾ೦ಗದನಂತೆ ವ್ರತವ ನಾನರಿಯೆ
ಶುಕ ಮುನಿಯಂತೆ ಸ್ತುತಿಸಲರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೇ

ಬಲಿಯಂತೆ ದಾನವ ಕೊಡಲಾರಿಯೇ ಕೃಷ್ಣಾ
ಭಕ್ತಿ ಛಲವನರಿಯೆ ಪ್ರಹ್ಲಾದನಂತೆ
ಒಲಿಸಲರಿಯೆ ಅರ್ಜುನನಂತೆ ಸಖನಾಗಿ
ಸಲಹಿಕೊಳ್ಳೋ ಪುರಂದರ ವಿಠ್ಠಲ ।। 

Saturday, 25 April 2020

ಕಂಗಳಿದ್ಯಾತಕೋ ಕಾವೇರಿರಂಗನ ನೋಡದ

ಕಂಗಳಿದ್ಯಾತಕೋ ಕಾವೇರಿರಂಗನ ನೋಡದ ।।

ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀ ಪಾದಂಗಳ ನೋಡದ ।।

ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು
ಚಂದ್ರ ಪುಷ್ಕರಣಿ ಸ್ನಾನವ ಮಾಡಿ
ಆನಂದದಿಂದಲಿ ರಂಗನ ನೋಡದ ।।

ಹರಿಪಾದೋದಕ ಸಮ ಕಾವೇರಿ
ವಿರಜಾನದಿಲಿ ಸ್ನಾನವ ಮಾಡಿ
ಪರಮ ವೈಕುಂಠ ರಂಗ ಮಂದಿರ
ಪರವಾಸುದೇವನ ನೋಡದ ।।

ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರ ಪದಕ
ತೇರನೇರಿ ಬೀದಿಲಿ ಬರುವ
ರಂಗವಿಠಲ ರಾಯನ ನೋಡದ ।।




ಬಿಡೆನೋ ನಿನ್ನಂಘಿೃ ಶ್ರೀನಿವಾಸಾ

ಬಿಡೆನೋ ನಿನ್ನಂಘಿೃ  ಶ್ರೀನಿವಾಸಾ ಎನ್ನ
ದುಡಿಸಿಕೊಳ್ಳೆಲೋ ಶ್ರೀನಿವಾಸಾ
ನಿನ್ನುಡಿಯೇ ಜೀತೆಲ್ಲೊ ಶ್ರೀನಿವಾಸಾ ಎನ್ನ
ನಡೆತಪ್ಪು ಕಾಯೋ ಶ್ರೀನಿವಾಸಾ ।।

ಬಡಿಯೋ ಬೆನ್ನಲಿ ಶ್ರೀನಿವಾಸಾ
ಎನ್ನೊಡಲ ಹೊಯ್ಯದಿರೋ ಶ್ರೀನಿವಾಸಾ
ನಾ ಬಡವ ಕಾಣೆಲೋ ಶ್ರೀನಿವಾಸಾ
ನಿನ್ನೊಡಲ ಹೊಕ್ಕೆನೋ ಶ್ರೀನಿವಾಸಾ ।।

ಪಂಜುಪಿಡಿವೆನೋ ಶ್ರೀನಿವಾಸಾ
ನಿನ್ನೆಂಜಲ ಬಳಿದುಂಬೆ ಶ್ರೀನಿವಾಸಾ
ನಾ ಸಂಜೆ ಉದಯಕೆ ಶ್ರೀನಿವಾಸಾ
ಕಾಳ೦ಜೆಯ ಪಿಡಿವೆ ಶ್ರೀನಿವಾಸಾ ।।

ಸತ್ತಿಗೆ ಚಾಮರ ಶ್ರೀನಿವಾಸಾ 
ನಾನೆತ್ತಿಕುಣಿವೆನೋ ಶ್ರೀನಿವಾಸಾ
ನಿನ್ನ ರತ್ನದ ಹಾವಿಗೆ ಶ್ರೀನಿವಾಸಾ
ನಾ ಹೊತ್ತು ನಲಿವೆನೋ ಶ್ರೀನಿವಾಸಾ ।।

ಹೇಳಿದಂತಾಲಿಪೆ ಶ್ರೀನಿವಾಸಾ
ನಿನ್ನಾಳಿಗಳಾಗಿಹೆ ಶ್ರೀನಿವಾಸಾ
ಅವ ರೋಳಿಗವ ಮಾಳ್ಫೆ ಶ್ರೀನಿವಾಸಾ
ಎನ್ನ ಪಾಲಿಸೋ ಬಿಡದೇ ಶ್ರೀನಿವಾಸಾ ।।

ನಿನ್ನ ನಾಮ ಹೋಳಿಗೆ ಶ್ರೀನಿವಾಸಾ
ಕಳ್ಳ ಕುನ್ನಿ ನಾನಾಗಿಹೆ  ಶ್ರೀನಿವಾಸಾ
ಕಟ್ಟಿ ನಿನ್ನವರೊದ್ದರೆ ಶ್ರೀನಿವಾಸಾ
ಎನಗಿನ್ನು ಲಜ್ಜೇತಕೆ ಶ್ರೀನಿವಾಸಾ ।।

ಬೀಸಿ ಕೊಲ್ಲಲವರೆ ಶ್ರೀನಿವಾಸಾ
ಮುದ್ರೆ ಕಾಸಿ ಚುಚ್ಚಲವರೆ ಶ್ರೀನಿವಾಸಾ
ಮಿಕ್ಕ ಘಾಸಿಗಂಜೆನಯ್ಯ ಶ್ರೀನಿವಾಸಾ
ಎಂಜಲಾಸೆಯ ಬಂಟ ನಾ ಶ್ರೀನಿವಾಸಾ ।।

ಹೇಸಿ ನಾನಾದರೆ ಶ್ರೀನಿವಾಸಾ
ಹರಿ ದಾಸರೊಳು ಪೊಕ್ಕೆ ಶ್ರೀನಿವಾಸಾ
ಅವರ ಭಾಷೆಯ ಕೇಳಿಹೆ ಶ್ರೀನಿವಾಸಾ
ಆ ವಾಸಿಯ ಸೈರಿಸೊ ಶ್ರೀನಿವಾಸಾ ।।

ತಿಂಗಳವನಲ್ಲ ಶ್ರೀನಿವಾಸಾ
ವತ್ಸ ರಂಗಳವನಲ್ಲ ಶ್ರೀನಿವಾಸಾ
ರಾಜ೦ಗಳ ಸವಡಿಪೆ ಶ್ರೀನಿವಾಸಾ
ಭಾವಂಗಳ ದಾಟುವೆ ಶ್ರೀನಿವಾಸಾ ।।

ನಿನ್ನವ ನಿನ್ನವ ಶ್ರೀನಿವಾಸಾ
ನಾ ನಾನ್ಯವನರಿಯೆನು ಶ್ರೀನಿವಾಸಾ
ಅಯ್ಯಾ ಮನ್ನಿಸೊ  ತಾಯ್ತಂದೆ ಶ್ರೀನಿವಾಸಾ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸಾ ।।

ಶ್ರೀನಿವಾಸ ನೀನೆ ಪಾಲಿಸೋ

ಶ್ರೀನಿವಾಸ ನೀನೆ ಪಾಲಿಸೋ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೆ ।।

ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಸುವ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ ।।

ಎಷ್ಟು ದಿನ ಕಷ್ಟಪಡುವುದೋ ಯಶೋದೆ ಕಂದ
ದೃಷ್ಟಿಯಿಂದ (ನೀ) ನೋಡಲಾಗದೆ
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದೊಳಗೆ
ದುಷ್ಟಕಾರ್ಯ ಮಾಡಿದಾಗ್ಯೂ ಶಿಷ್ಠನಾಗಿ ಕೈಯಪಿಡಿದು ।।

ಎಂದಿಗೆ  ನಿನ್ನ ಪಾದಾಬ್ಜವ ಪೊಂದುವ ಸಖ
ಎಂದಿಗೆ ಲಭ್ಯವೋ ಮಾಧವ
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತ್ತಿಹೆನು
ಚಂದದಿಂ ಭವಾಬ್ಧಿಗೆಂದು ಬೆಂದು ನೊಂದೆನೋ ಮುಕುಂದ ।।

ಅನುದಿನ ಅನೇಕ ರೋಗಗಳ ಅನುಭವಿಸುವೆನು
ಘನ್ನ ಮಹಿಮ ನೀನೆ ಬಲ್ಲೆಯಾ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠ್ಠಲ ನೀ ಎನಗೆ ಒಲಿದು ।।


ರಾಗಿ ತಂದೀರಾ

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ 
ಯೋಗ್ಯರಾಗಿ ಭೋಗ್ಯರಾಗಿ 
ಭಾಗ್ಯವಂತರಾಗಿ ನೀವು 

ಅನ್ನ ದಾನವ ಮಾಡುವರಾಗಿ 
ಅನ್ನ ಛತ್ರವ ನಿಟ್ಟವರಾಗಿ 
ಅನ್ಯವಾರ್ತೆಯ ಬಿಟ್ಟವರಾಗಿ 
ಅನುದಿನ ಭಜನೆಯ ಮಾಡುವರಾಗಿ 

ಮಾತಾಪಿತರನು ಸೇವಿಪರಾಗಿ 
ಪಾಪ ಕಾರ್ಯವ ಬಿಟ್ಟವರಾಗಿ 
ಖ್ಯಾತಿಯಲಿ ಮಿಗಿಲಾದವರಾಗಿ 
ನೀತಿ ಮಾರ್ಗದಲಿ ಖ್ಯಾತರಾಗಿ ।।

ಗುರು ಕಾರುಣ್ಯವ ಪಡೆದವರಾಗಿ 
ಗುರುವಿನ ಮರ್ಮವ ತಿಳಿದವರಾಗಿ 
ಗುರುವಿನ ಪಾದವ ಸ್ಮರಿಸುವರಾಗಿ 
ಪರಮಪುಣ್ಯವ ಮಾಡುವರಾಗಿ ।।

ಶ್ರೀನಿವಾಸನ ಸ್ಮರಿಸುವರಾಗಿ 
ಪ್ರಾಣರಾಯನ ದಾಸರಾಗಿ 
ದಾನಕೆಂದು ಹೆದರಿದವರಾಗಿ 
ಧೀನ ವೃತ್ತಿಯಲಿ ಹೀನರಾಗಿ ।।

ಪಕ್ಷಮಾಸ ವ್ರತ ಮಾಡುವರಾಗಿ 
ಪಕ್ಷಿವಾಹನಗೆ ಪ್ರೀಯರಾಗಿ 
ಕುಕ್ಷಿಲಿ ಕಲ್ಮಶ ಇಲ್ಲದವರಾಗಿ 
ಭಿಕ್ಷಕರು ಅತಿ ತುಚ್ಛರಾಗಿ ।।

ಕಾಮಕ್ರೋಧಗಳ ಅಳಿದವರಾಗಿ 
ನೇಮ ನಿಷ್ಠೆಗಳ ಮಾಡುವರಾಗಿ 
ಆ ಮಹಾ ಪದದಲಿ ಸುಖಿಸುವರಾಗಿ 
ಪ್ರೇಮದಿ ಕುಣಿ ಕುಣಿದಾಡುವರಾಗಿ ।।

ಸಿರಿರಮಣನ ಸದಾ ಸ್ಮರಿಸುವರಾಗಿ 
ಗುರುತಿಗೆ ಬಾಹೋ ರಂಥವರಾಗಿ 
ಕರೆ ಕರೆ ಸಂಸಾರ ನೀಗುವರಾಗಿ 
ಪುರಂದರ ವಿಠ್ಠಲನ ಸೇವಿಪರಾಗಿ ।।