ನಿನ್ನ ನಂಬಿ ಬಂದೆ ಎನ್ನ ಕೈ ಬಿಡಬೇಡ
ಘನ್ನ ಮಹಿಮನೆ ಶ್ರೀನಿವಾಸ ।।
ಪನ್ನಗ ಶಯನ ಪನ್ನ ರಕ್ಷಕ ।
ಪ್ರಸನ್ನನಾಗೋ ಬೇಗ ಶ್ರೀನಿವಾಸ ।।
ಜನನಿ ಜನಕನೆ ಶ್ರೀನಿವಾಸ
ಎನ್ನನುಭಂಧಿಯು ನೀನೆ ಶ್ರೀನಿವಾಸ ।।
ಜನುಮ ಜನುಮದೊಳು ಶ್ರೀನಿವಾಸ
ಎನ್ನನುದ್ದರಿಸುವವನೇ ಶ್ರೀನಿವಾಸ ।।
ದೇಶದೇಶವತಿರುಗಿ ಶ್ರೀನಿವಾಸ ಬಹು
ಕ್ಲೇಶ ಪಟ್ಟಿರುವೆನು ಶ್ರೀನಿವಾಸ ।।
ಆಶಾ ಪಾಶವ ಬಿಡಿಸೋ ಶ್ರೀನಿವಾಸ
ನಿನ್ನ ದಾಸರ ಸಂಗಕೊಡೋ ಶ್ರೀನಿವಾಸ ।।
ಬಂಧನವ ಕೊಡುವವನೆ ಶ್ರೀನಿವಾಸ
ಭವ ಬಂಧನವ ಬಿಡಿಸುವವನೆ ಶ್ರೀನಿವಾಸ ।।
ಅಂದು ನೀನೆ ಇಂದು ನೀನೆ ಶ್ರೀನಿವಾಸ
ಎಂದೆಂದೆ೦ದಿಗೂ ನೀನೆ ಶ್ರೀನಿವಾಸ ।।
ಹೃದಯದಲ್ಲಿ ನಿನ್ನರೂಪ ಶ್ರೀನಿವಾಸ
ಎನ್ನ ವದನದಲ್ಲಿ ನಿನ್ನ ನಾಮ ಶ್ರೀನಿವಾಸ ।।
ಸದಯನಾಗಿ ಎನಗೆ ಒಲಿದು ಶ್ರೀನಿವಾಸ
ನೀನು ಒದಗಿ ಬಂದು ಪಾಲಿಸಯ್ಯ ಶ್ರೀನಿವಾಸ ।।
ಜಲ್ಲಡಿಯ ನೆರಳಿನಂತೆ ಶ್ರೀನಿವಾಸ
ಬಹು ತಲ್ಲಣವಗೊಳಿಸುವವನೆ ಶ್ರೀನಿವಾಸ ।।
ಬಲ್ಲವರು ಯಾರಯ್ಯ ಶ್ರೀನಿವಾಸ
ಸಿರಿವಲ್ಲಭನೆ ಎನ್ನ ತಂದೆ ವೆಂಕಟೇಶ ।।
No comments:
Post a Comment